ನಾಟಕ ವಿಮರ್ಶೆ: `ಗಾಂಧಿ ನಮ್ಮ ಮೂಗಿನ ನೇರಕ್ಕೆ ನಿಲ್ಲುತ್ತಾರೆಯೇ!?'

ಬರೆದವರು: ಎಚ್.ಎಸ್. ಪ್ರಭಾಕರ - ಕಳುಹಿಸಿದ ದಿನ 26 November 2009


ನಾಟಕ ವಿಮರ್ಶೆ: `ಗಾಂಧಿ ವರ್ಸಸ್ ಗಾಂಧಿ'


ಗಾಂಧಿ ನಮ್ಮ ಮೂಗಿನ ನೇರಕ್ಕೆ ನಿಲ್ಲುತ್ತಾರೆಯೇ!?

ಯಾವುದೇ ಸೃಜನಶೀಲ ಅಥವಾ ರಂಗ ಭೂಮಿ ಚಟುವಟಿಕೆಗೆ ತನ್ನದೇ ಆದ ಉದ್ದೇಶವಿರುತ್ತದೆ. ಅಂದರೆ- ಮನರಂಜನೆಯೋ, ವೈಚಾರಿಕತೆಯೋ, ಇತಿಹಾಸ ಬಿಚ್ಚಿಡುವುದೋ, ಜಗತ್ತಿನ ಕೆಲವು `ಇಸಂ'ಗಳ ಅಥವಾ ಮೌಲ್ಯಗಳ ಪ್ರತಿಪಾದನೆಯೋ, ಮೌಢ್ಯಗಳ ಧಿಕ್ಕರಿಸಿ ಸಮಾಜದ ಓರೆ ಕೋರೆಗಳನ್ನು ತಿದ್ದುವುದೋ-ಹೀಗೆ ಉತ್ತಮ ಸಂದೇಶ ಸಾರುವುದಾಗಿರುತ್ತದೆ; ಆಗಿರಲೂ ಬೇಕು!
ಆದರೆ ಹಾಸನದ ಕಲಾಭವನದಲ್ಲಿ ಸ್ಥಳೀಯ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ನವೆಂಬರ್ 24 ರಂದು ಸಂಜೆ `ಕಲಾಸಿರಿ' ತಂಡವು ರಂಗ ಕರ್ಮಿ ಜಯಶಂಕರ ಬೆಳಗುಂಬ ನಿರ್ದೇಶನದಲ್ಲಿ ಪ್ರಯೋಗಿಸಿದ `ಗಾಂಧಿ ವರ್ಸಸ್ ಗಾಂಧಿ' ಎಂಬ ನಾಟಕದಲ್ಲಿ ಇಂತಹ ಯಾವುದೇ ಉದ್ದೇಶ ಕಾಣಲಿಲ್ಲ; ಕಥಾ ವಸ್ತುವನ್ನು ನಿರ್ದೇಶಕರು ತಮ್ಮ ಮೂಗಿನ ನೇರಕ್ಕೆ ತೆಗೆದುಕೊಂಡಿರುವಂತೆ ಕಾಣುತ್ತದೆ. ಕಥಾ ವಸ್ತುವಿನಲ್ಲಿದ್ದ ಕೆಲವು ವಾಸ್ತವಾಂಶಗಳನ್ನು ಮರೆಮಾಚಿರುವುದೇ ಇದಕ್ಕೆ ಸಾಕ್ಷಿ! ಗಾಂಧಿ ಎಂಬ ವ್ಯಕ್ತಿತ್ವ ನಮ್ಮ ಮೂಗಿನ ನೇರಕ್ಕೆ ನಿಲ್ಲುವಷ್ಟು ಸೀಮಿತವೆ!?
ತುಂಬಾ ಆಸಕ್ತಿ, ಉತ್ಸಾಹ ಹಾಗೂ ಜತನದಿಂದ ನಾಟಕ ಪ್ರಯೋಗಿಸಿರುವ ಜಯಶಂಕರ ಬೆಳಗುಂಬ ಅವರನ್ನು ಸದ್ಯಕ್ಕೆ ನಿರ್ಲಿಪ್ತ ಭಾವದಿಂದಲೇ ಒಂದು ಕಡೆ ನಿಲ್ಲಿಸಿ, ಮೊದಲು ಈ ಗಾಂಧಿ ವರ್ಸಸ್ ಗಾಂಧಿ ಎಂಬ ಕೃತಿಯತ್ತ ಗಮನ ಹರಿಸಬೇಕಿದೆ! ಇದು ಗುಜರಾತಿ ಭಾಷೆಯಲ್ಲಿ ದಿನಕರ ಜೋಷಿ ಅವರು ಬರೆದ ಒಂದು ಮೂಲ ಕಾದಂಬರಿ. ಸ್ಮಿತಾ ಭಾಗವತರು ಇದನ್ನು ಮರಾಠಿಗೆ ಅನುವಾದಿಸಿದರು. ಅದೊಂದು ವಿವಾದಾತ್ಮಕ ಸಾಹಿತ್ಯ ಕೃತಿ. ಹೀಗಾಗಿಯೇ ಅದನ್ನು ಗುಜರಾತ್ ಸರ್ಕಾರ ನಿಷೇಧಿಸಿತು.
ಇನ್ನು, ಹೊಸ ತಲೆಮಾರಿನ ನಾಟಕ ನಿರ್ದೇಶಕರು `ರಂಗ ಕೃತಿ'ಯಾಗಬಲ್ಲ ಒಂದು ಸಾಹಿತ್ಯವನ್ನೇ ಆರಿಸಿ, ನಿರ್ದೇಶಕರ ಸಲುವಾಗಿಯೇ ನಾಟಕ ರಚಿಸಿಕೊಳ್ಳುವ ಪರಿಪಾಠ ಹೊಸದೇನಲ್ಲ. ಅಂತಹ ಪ್ರಯತ್ನ ಸಾಫಲ್ಯ ಕಾಣದಿದ್ದಾಗ ಕಥೆ, ಕಾದಂಬರಿಗಳನ್ನು ರೂಪಾಂತರಿಸಿಕೊಂಡು ರಂಗ ಪ್ರಯೋಗಕ್ಕೆ ಇಳಿದರು. ಗಾಂಧಿ ವರ್ಸಸ್ ಗಾಂಧಿ ಎಂಬ ಸಾಹಿತ್ಯ ಕೃತಿಯನ್ನು ಅಜಿತ್ ದಳವಿ ಎಂಬುವರು ಮರಾಠಿ ನಾಟಕವಾಗಿ ರೂಪಾಂತರಿಸಿದ್ದೂ ಸಹ ಇಂತಹ ಪ್ರಯೋಗಗಳಲ್ಲಿ ಒಂದು. ಇದನ್ನೇ ಬೆಳಗಾವಿಯ ಡಿ.ಎಸ್. ಚೌಗಲೆ ಎಂಬುವರು ಕನ್ನಡಕ್ಕೆ ಅನುವಾದಿಸಿದರು. ಸತ್ತುಹೋಗಿದ್ದ ಕೃತಿಯೊಂದಕ್ಕೆ ಮರು ಜೀವ ಬಂದದ್ದು ಹೀಗೆ!
ಈಗ ನಾವು ನೋಡುತ್ತಿರುವ ರಂಗ ರೂಪ ಪಡೆದ ಕೃತಿಯ ಕಥಾ ವಸ್ತುವಿನ ಪ್ರಕಾರ, `ಗಾಂಧಿ ತಮ್ಮ ಹಿರಿಯ ಮಗ ಹರಿಲಾಲನನ್ನು ನಿರ್ಲಕ್ಷಿಸಿದರು; ಅವನು ಬೆಳೆಯಲು ಯಾವ ಅವಕಾಶವನ್ನೂ ನೀಡದೆ ಅವನ ಜೀವನ ಹಾಳು ಮಾಡಿದರು; ಹರಿಲಾಲ್ ಸೇರಿದಂತೆ ತಮ್ಮ ಕುಟುಂಬ ಸದಸ್ಯರಿಗೆ ಸಲ್ಲಬೇಕಾದ ಐಹಿಕ ಸುಖ ಭೋಗಗಳನ್ನು ನಿರಾಕರಿಸಿದರು; ಆತ ಬೇಸತ್ತು ಮುಸಲ್ಮಾನನಾಗಿ ಮತಾಂತರ ಹೊಂದಿದ; ಆ ನಂತರ ಮತ್ತೆ ಹಿಂದೂ ಮತಕ್ಕೆ ಮರಳಿದ; ಮಗ ಹರಿಲಾಲನೇ ಅಪ್ಪ ಗಾಂಧೀಜಿಯ ಬದ್ಧ ದ್ವೇಷಿಯಾದ; ಅಲೆಮಾರಿಯಾದ; ಕೊನೆಗೆ ಅಯ್ಯೋ! ಗಾಂಧೀಜಿ ಮಗನಾಗಿ ಕೊನೆಗಾಲದಲ್ಲಿ ದಿಕ್ಕಿಲ್ಲದ ಅನಾಥನಂತೆ ಸತ್ತ; ಒಟ್ಟಾರೆ ಗಾಂಧಿ ಎಂಬ ಮನುಷ್ಯ ಸಹಜ ಜೀವನ ಕ್ರಮದ `ವಿರೋಧಿ'; ``ಅದ್ಯಾವೊದೋ ನೈತಿಕ ಶಿಕ್ಷಣ''ದ ಹೆಸರಲ್ಲಿ ಎಲ್ಲವನ್ನೂ ಪ್ರಶ್ನಿಸುವ ಹಾಗೂ ಎಲ್ಲದಕ್ಕೂ ಅಡ್ಡಿಪಡಿಸುವ ಒಂದು ಮಹಾನ್ ಕೊರೆತ'- ಇದು ಗಾಂಧಿಯನ್ನು ``ಬೇರೆಯದೇ ದೃಷ್ಟಿ ಕೋನದಿಂದ ಅಳೆಯಲು'' ದೇಶದ ಒಂದು ವರ್ಗಕ್ಕೆ ಸಿಕ್ಕಿದ ಉದ್ದನೆಯ ಮೀಟರ್ ಕಡ್ಡಿ!
ನಂತರದ ಸರದಿ ನಿರ್ದೇಶಕ ಜಯಶಂಕರ ಬೆಳಗುಂಬರದ್ದು. ಈ ಮುನ್ನ ಒಂದು ಕಡೆ ನಿಲ್ಲಿಸಿದ್ದ ಅವರನ್ನು ಇದೀಗ ರಂಗದ ಮೇಲೆ ತರೋಣ. ಗಾಂಧಿ ಪಾತ್ರಧಾರಿಯೂ ಆಗಿ-ಅದರಲ್ಲೂ ಬ್ಯಾರಿಸ್ಟರ್ ಗಾಂಧಿಯಾಗಿ (ವಯಸ್ಸಿದ್ದಾಗಲೂ ಬಗ್ಗಿ ನಡೆಯುತ್ತಿದ್ದರು ಎಂಬುದನ್ನು ಹೊರತುಪಡಿಸಿದರೆ) ಅವರ ನಟನೆ ನಿಜಕ್ಕೂ ಸಹಜ ಹಾಗೂ ತಲೆದೂಗುವಂತಿತ್ತು. ಆದರೆ ಇದೇ ಮಾತನ್ನು ಅವರ ನಿರ್ದೇಶನದ ಬಗ್ಗೆ ಹೇಳುವಂತಿಲ್ಲ ಎಂಬುದೇ ಒಂದು ದೊಡ್ಡ ವ್ಯಥೆ!
ಹರಿಲಾಲ ದಾರಿ ತಪ್ಪಿದ್ದು ಎಲ್ಲಿ-ಏಕೆ? ಆತನ ಸಹವಾಸಗಳು, ಸ್ನೇಹ ಸಂದರ್ಭಗಳು ಹೇಗಿದ್ದವು? ಅವನ ದೌರ್ಬಲ್ಯಗಳೇನು? ಅವನ ಬಂಡಾಯ ಎಂತಹುದು ಮತ್ತು ಯಾವುದಕ್ಕಾಗಿ? ನಿಜವಾಗಿಯೂ ಗಾಂಧಿಯೇ ಅವನನ್ನು ಹೊಸಕಿ ಹಾಕಿದರೆ?- ಇತ್ಯಾದಿ ಯಾವ ನೈಜ ಅಂಶಗಳನ್ನೂ ನಾಟಕ ಎತ್ತಿ ಹಿಡಿದಿಲ್ಲ. ವಾಸ್ತವವಾಗಿ ಕೃತಿಯಲ್ಲಿಯೇ ಇದ್ದ ಕೆಲವು ಮಹತ್ವದ ತಿರುವುಗಳನ್ನೂ ಸಹ ಮರೆ ಮಾಚಲಾಗಿದೆ! ಹಾಗಾದರೆ ನಿರ್ದೇಶಕರು ಏನು ಹೇಳಲು ಹೊರಟಿದ್ದಾರೆ? ಅವರ ಉದ್ದೇಶವಾದರೂ ಏನು?
ಹರಿಲಾಲ ನಿಜಕ್ಕೂ ಹಾಳಾಗಿದ್ದು ಒಂದು ನಿರ್ದಿಷ್ಟ ಗುಂಪು ಹೂಡಿದ ಒಂದು ಸಂಚಿನಿಂದ! ಗಾಂಧೀಜಿ ಹೆಸರಿನಲ್ಲಿ ಮೂರನೆಯವರು ಆತನನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡ ಫಲವಾಗಿ ಆತ ಹಾಳಾದ. ಅವನ ದೌರ್ಬಲ್ಯಗಳೇ ಅವನು ಅಂತಹವರ ಬಲೆಗೆ ಬೀಳಲು ಕಾರಣವಾದವು. ನಂತರ ಮದ್ಯ ವ್ಯಸನಿಯೂ ಆದ. ಪರಿಣಾಮವಾಗಿ ಆತ ಉದ್ಯಮವೊಂದರ ಶೇರುಗಳನ್ನು ನುಂಗಿದ ದಗಾಕೋರನಾಗಿ ಪೊಲೀಸರು ಅವನನ್ನು ಬಂಧಿಸಿದ್ದರು. ಸಂಚಿನ ಫಲವಾಗಿಯೇ ಹಿಂದೂ ಮತ ತೊರೆದು ಮುಸಲ್ಮಾನನಾಗಿ ಮತಾಂತರಗೊಂಡ. ನಂತರ ಮಹದೇವ ದೇಸಾಯಿ ಅವರ ಮೂಲಕ ಆತನ ತಾಯಿಯ ಆಗ್ರಹ ಹಾಗೂ ಬೇಗುದಿ ಅರಿತು ಮತ್ತೆ ಹಿಂದೂ ಧರ್ಮಕ್ಕೆ ಮರಳಿದ. ಹೀಗೆಯೇ ದಿನೇ ದಿನೇ ತಾನಾಗಿಯೇ ನೈತಿಕವಾಗಿ ಹಾಗೂ ಸಾಮಾಜಿಕವಾಗಿ ಅಥಃಪತನ ಹೊಂದುತ್ತಾ ಸಾಗಿ ಕೊನೆಗೆ ದಿಕ್ಕಿಲ್ಲದ ಅನಾಥನಂತೆ ಸತ್ತ. ದೊಡ್ಡ ಮನುಷ್ಯರ ಮಗನೊಬ್ಬ ಹೇಗಿರಬಾರದು ಎಂಬುದಕ್ಕೆ ಆತ ನಿದರ್ಶನ; ಇಂತಹ ಹರಿಲಾಲರು ಸಮಾಜದಲ್ಲಿ ಲಕ್ಷಾಂತರ ಮಂದಿ ಸಿಗುತ್ತಾರೆ; ಹೀಗಾಗಿ ಹರಿಲಾಲ ಇಂದಿಗೂ ಪ್ರಸ್ತುತ. ಆತನನ್ನು ಅಪ್ರಸ್ತುತ ಮಾಡುವುದೇ ಒಂದು ಸೃಜನಶೀಲ ಕೃತಿಯ ಮೂಲ ಸದುದ್ದೇಶವಾಗಬೇಕು.
ಆದರೆ ಗಾಂಧಿ!? ಊರಿಗೊಬ್ಬ, ರಾಜ್ಯಕ್ಕೊಬ್ಬ ಇರುವುದು ಹಾಳಾಗಲಿ; ಇಡೀ ದೇಶ-ಜಗತ್ತಿಗೇ ಇನ್ನೊಬ್ಬ ಗಾಂಧಿ ಈಗ ಇದ್ದಾನೆಯೇ? ಹೀಗಾಗಿ ಗಾಂಧಿ ಎಂಬ ಸಾಧಕ ಅಪ್ರಸ್ತುತ! ನಿಜ! ಆ ವ್ಯಕ್ತಿಯನ್ನು ಮರೆತೇ ಬಿಡೋಣ. ಆದರೆ ಆತ ಹಿಡಿದಿದ್ದ `ಸಾಧನ'ಗಳು ಇವೆಯಲ್ಲ ಅವು? ಮನುಕುಲದ ಆರಂಭದಿಂದ ಅಂತ್ಯವಾಗುವವರೆಗೂ ಅವು `ನಿಮಗಾಗಿ ನಾವು ಇಲ್ಲಿ ಇದ್ದೇವೆ' ಎಂದು ಸಾರುತ್ತಾ ನಿಂತೇ ಇರುತ್ತವೆ. `ಅಪ್ರಸ್ತುತ' ಎಂದು ನಾವು ಅವನ್ನು ಹಿಡಿಯದೇ ಇರಬಹುದು; ಅದು ನಮಗಾಗುವ ಭಾರಿ ನಷ್ಟವೇ ಹೊರತು ಸತ್ಯ ಅಹಿಂಸೆಗಳಿಗೆ ಆಗುತ್ತಿರುವ ನಷ್ಟವಲ್ಲವಲ್ಲಾ!? ಹೀಗಾಗಿ ಯಾವ ಹರಿಲಾಲನನ್ನು ಅಪ್ರಸ್ತುತ ಮಾಡುವುದು ಒಂದು ಕೃತಿಯ ಸದುದ್ದೇಶವೋ; ಅದೇ ರೀತಿ `ಗಾಂಧಿ'ಯನ್ನು ಪ್ರಸ್ತುತ ಮಾಡುವುದೂ ಸಹ ಅದೇ ಕೃತಿಯ ಸದುದ್ದೇಶವಾಗಬೇಕು!!
ಹರಿಲಾಲನ ಸ್ವಯಂಕೃತ ಅಪರಾಧಗಳಿಗೆ ಗಾಂಧಿ ಹೇಗೆ ಹೊಣೆಯಾಗುತ್ತಾರೆ!? ನಾಟಕದಲ್ಲಿ ಕಾಲ, ದೇಶ, ಪರಿಸ್ಥಿತಿಗಳ ಅರಿವೇ ಇಲ್ಲದೆ ಗಾಂಧಿ ಎದುರಿಗೇ ಹರಿಲಾಲನ ಅಸಹಜ ಅಬ್ಬರ, ಅಟ್ಟಹಾಸ, ಕೊನೆಗೆ ಅಪ್ಪ ಗಾಂಧಿ ಗುಂಡೇಟಿಗೆ ಬಲಿಯಾದನೆಂಬ ಸುದ್ದಿ ಕೇಳಿದಾಗಲೂ ಸಹ `ಈ ಗಾಂಧಿ ಪತ್ರ ಬರೆಯಲೂ ಅಡಚಣೆ ಮಾಡುತ್ತಾನೆ' ಎಂಬ ಅಸಹನೀಯ ಡೈಲಾಗ್!! ಯಾವ `ಉತ್ಕೃಷ್ಟ ಮೌಲ್ಯ'ಗಳನ್ನು ಪ್ರತಿಪಾದಿಸಲು ಮೇಲ್ಕಂಡ ವಾಸ್ತವಾಂಶಗಳನ್ನು ಮರೆ ಮಾಚಿ ಬರೇ ಹರಿಲಾಲನ ಅಬ್ಬೇಪಾರಿತನಕ್ಕೆ ಒತ್ತು ಕೊಡಲಾಗಿದೆ!? ಮೊದಲೇ ಈ ಕೃತಿಯಲ್ಲಿ ಸತ್ಯ, ಅಹಿಂಸೆ, ಧರ್ಮ ಎಂಬ ಸಾರ್ವಕಾಲಿಕ ಮೌಲ್ಯಗಳನ್ನು ಕಡೆಗಣಿಸಿ ಐಹಿಕ ಸುಖ ಭೋಗಗಳಿಗಷ್ಟೇ ಒತ್ತು ನೀಡಲಾಗಿದೆ. ಅಂತಹ ಸಂದರ್ಭದಲ್ಲಿ, ಬೆಳಗುಂಬರಂಥಹ ಓರ್ವ ನಿರ್ದೇಶಕರು, ಅದರಲ್ಲೂ ತಮಗೆ ಬೇಕಾದ್ದನ್ನು ಮಾತ್ರ ಆಯ್ಕೆ ಮಾಡಿಕೊಂಡು ವೈಯಕ್ತಿಕ ಅಭಿಪ್ರಾಯಗಳನ್ನು ಪ್ರೇಕ್ಷಕರ ಮೇಲೆ ಹೇರುವುದು ಎಷ್ಟು ಸರಿ? ಹಾಗಾದರೆ ಮಾನವೀಯತೆ ಮೂಲ ಯಾವುದು? ಅದು ಜನರಲ್ಲಿ ಚಿಗುರುವ ಭರವಸೆಯಾದರೂ ಉಳಿದೀತೆ? ಬಸವ, ಬುದ್ಧ, ಗಾಂಧಿ, ಅಂಬೇಡ್ಕರ್ ಮುಂತಾದ ಮಹನೀಯರ ವಿಚಾರ ಧಾರೆಗಳಿಗೆಲ್ಲ ಯಾವ ಗತಿ ಹಿಡಿದೀತು? ಚಿಂತಿಸಿದರೆ ಭಯವಾಗುತ್ತದೆ!
ಒಂದು ಪರಂಪರೆ ಅಥವಾ ಇತಿಹಾಸವನ್ನು ನಾವು ನೋಡುವ ದೃಷ್ಟಿಕೋನ ಬೇರೆಯೇ ಇದೆ. ಅಂದರೆ, ಒಂದು ಮೌಲ್ಯ ಅಥವಾ ಧೋರಣೆಯನ್ನು ನಾವು ಮೊದಲು ಆಯಾ ಕಾಲ, ದೇಶ, ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ನಂತರವಷ್ಟೇ ಅದನ್ನು ವರ್ತಮಾನದೊಂದಿಗೆ ಸಮೀಕರಿಸಬೇಕು. ಆಗ ಮಾತ್ರ ಒಂದು ಸತ್ಯವೋ ಅಥವಾ ಸತ್ಯಕ್ಕೆ ಹತ್ತಿರವಾದ ಒಂದು ಹೊಳವೋ ಸಿಗುವ ಸಾಧ್ಯತೆ ಇದೆ. ಹಾಗೆ ಮಾಡದೆಯೇ ನಾವು ಕೇವಲ ವರ್ತಮಾನದ ದೃಷ್ಟಿಕೋನ ಇಟ್ಟುಕೊಂಡು `ಇದೆಂತಹ ಮೌಲ್ಯ; ಈ ಧೋರಣೆ ಅಮಾನವೀಯ...'ಹಾಗೆ ಹೀಗೆ ಎಂದೆಲ್ಲ ಬಡಬಡಿಸಿದರೆ-ಅದು ವರ್ತಮಾನಕ್ಕೆ ಮಾಡಿದ ದ್ರೋಹವಾಗುತ್ತದೆ; ಹಲವು ಅನರ್ಥಗಳಿಗೆ ಕಾರಣವಾಗುತ್ತದೆ. ಇಲ್ಲಿ ಆಗಿರುವುದೋ ಅದೇ! ಹೀಗಾಗಿಯೇ ಈ ಪ್ರಯೋಗದಲ್ಲಿ ಕೌಟುಂಬಿಕ ಅಥವಾ ಸಾಮಾಜಿಕ ವ್ಯಕ್ತಿ ಸಂಬಂಧಗಳ ನಡುವೆ ಗಾಂಧಿ ಕಾಲದ ನಡೆ ನುಡಿಯಾಗಲಿ; ಒಂದು ನವಿರಾಗಲಿ, ಬೇಗುದಿಯಾಗಲಿ, ನುಂಗಲೂ ಆಗದ, ಉಗುಳಲೂ ಆಗದ ಬಿಸಿ ತುಪ್ಪದಂತಹ ಯಾವುದೇ ಸೂಕ್ಷ್ಮತೆಗಳಾಗಲಿ ಕಾಣಸಿಗುತ್ತಿಲ್ಲ. ಎಷ್ಟೇ ಎಣ್ಣೆ ಹೊಯ್ದರೂ ದೀಪ ಹತ್ತಿ ಉರಿಯಲು ನಿರಾಕರಿಸಿದರೆ ಇನ್ನೊಬ್ಬರಿಗೆ ಬೆಳಕು ನೀಡಲು ಸಾಧ್ಯವೆ? ಸಾಣೆಕಲ್ಲಿನ ಮೇಲೆ ಉಜ್ಜಲು ಹೋದಾಗ ಗಂಧದ ಕೊರಡು ತೇಯ್ದುಕೊಳ್ಳಲು ನಿರಾಕರಿಸಿದರೆ ಸುಗಂಧ ಪಸರಿಸಲು ಸಾಧ್ಯವೆ?
ಎರಡನೆಯದಾಗಿ, ಯಾವುದೇ ರಾಷ್ಟ್ರ ನಾಯಕನ ಕಾರ್ಯ ಕ್ಷೇತ್ರವಾದ ರಾಜಕೀಯದ ದಟ್ಟ ನೆರಳು ಆತನ ಕುಟುಂಬದ ಮೇಲೂ ಸದಾ ಹರಡಿಕೊಂಡೇ ಇರುತ್ತದೆ. ಭಾರತದಂತಹ ಓರ್ವ ರಾಷ್ಟ್ರ ನಾಯಕನ ಹಾಗೂ ಇಡೀ ಜಗತ್ತಿನಲ್ಲೇ ಪ್ರಪ್ರಥಮವಾಗಿ ಅಹಿಂಸಾತ್ಮಕ ಚಳವಳಿಯ ಮೂಲಕ ಸ್ವಾತಂತ್ರ್ಯ ಗಳಿಸಿಕೊಡಲು ಹೊರಟಿದ್ದ ಗಾಂಧೀಜಿ ಕುಟಂಬದ ಮೇಲೂ ಇಂತಹ ನೆರಳು ಹಬ್ಬಿತ್ತು. ಮೇಲೆ ಹೇಳಿದಂತೆ ಹರಿಲಾಲನನ್ನು ಕೆಡಿಸಿದ ಒಂದು ಗುಂಪಿನ ಸಂಚೂ ಸಹ ಇದರ ಒಂದು ಭಾಗವೇ ಆಗಿದೆ. ``ಗಾಂಧಿ ಮೈ ಫಾದರ್'' ಹಿಂದಿ ಸಿನಿಮಾ ನೋಡಿದರೆ ಇದೆಲ್ಲಾ ಅರ್ಥವಾದೀತು! ಒಟ್ಟಾರೆ ಯಾವುದೇ ನಾಟಕದ ಮೂಲಕ ಯಾವುದೇ ವಿಚಾರ ಪ್ರತಿಪಾದಿಸಿದರೂ ಅದು ಸದಭಿರುಚಿಯಿಂದ ಕೂಡಿರಬೇಕು; `ನಾವು ಆಡ್ತೀವಿ; ನೀವು ನೋಡ್ಕೊಂಡು ಹೋಗಿ' ಎಂಬಂತಿರಬಾರದು.
ಇನ್ನು, ಕಲಾಭವನದ ಧ್ವನಿಯ ವ್ಯವಸ್ಥೆಯಂತೂ ಯಥಾಪ್ರಕಾರ ಅದ್ವಾನವಾಗಿಯೇ ಇದೆ. ಬೆಳಕಿನ ವ್ಯವಸ್ಥೆ ಪರವಾಗಿಲ್ಲ. ಸಬರಮತಿ ಆಶ್ರಮದ ಸೆಟ್, ಕಸ್ತೂರಬಾ ಕನಸು ಕಾಣುವುದನ್ನು ಸಂಯೋಜಿಸಿರುವ ವಿಧಾನ ಚೆನ್ನಾಗಿದೆ. ಸಂಗೀತ ಏನೇನೂ ಸಾಲದು. ಮೊದಲೇ ಹೇಳಿದಂತೆ ಬೆಳಗುಂಬರ ಗಾಂಧಿ ಪಾತ್ರದ ನಟನೆಯಂತೂ ತುಂಬಾ ಚೆನ್ನಾಗಿ ಮೂಡಿಬಂದಿದೆ. ಉಳಿದ ಪಾತ್ರಧಾರಿಗಳಿಗೆ ಅನುಭವದ ಕೊರತೆ ಎದ್ದು ಕಾಣುತ್ತದೆ. ಇಂತಹ ನಾಟಕಕ್ಕೆ ಸಾಂಸ್ಕೃತಿಕ ವೇದಿಕೆಯವರು (ಇಬ್ಬರಿಗೆ) 50 ರೂ. ಟಿಕೆಟ್ ಇಟ್ಟಿದ್ದು ``ಗಾಂಧಿ(ಕ್ಲಾಸ್)ಗೆ ಟಿಕೆಟ್'' ನೀಡಲು ಎಂದು ಹೇಳಬಹುದೆ?

ನೀವೇ ಮೊದಲು ಓಟು ಹಾಕಿ. ಇನ್ನೂ ಯಾರೂ ಓಟು ಹಾಕಿಲ್ಲ.
ಎಚ್.ಎಸ್. ಪ್ರಭಾಕರ's picture
ಗುರು, 26/11/2009 - 18:21 ರಂದು ಎಚ್.ಎಸ್. ಪ್ರಭಾಕರ ಅವರು ಹೇಳುತ್ತಾರೆ
ಪ್ರಿಯ ಉಮಾಶಂಕರ್, ನಾಟಕದಲ್ಲಿ,

ಪ್ರಿಯ ಉಮಾಶಂಕರ್, ನಾಟಕದಲ್ಲಿ, `ಶಿಕ್ಷಣ ಎಂದರೇನು ಎಂಬ ವಿಚಾರವಾಗಿ ಒಂದು ದೃಶ್ಯವಿದ್ದು, ಅದರಲ್ಲಿ ಗಾಂಧೀಜಿ ಮಕ್ಕಳಾದ ಹರಿ ಹಾಗೂ ಮಣಿ ಇಬ್ಬರೂ ಕಸ್ತೂರ ಬಾ ಸಮ್ಮುಖದಲ್ಲಿ ಕುಹಕದ ಒಂದು ಅಣಕು ಪ್ರದರ್ಶನ ನೀಡುತ್ತಾರೆ. ಈ ಅಣಕು ಪ್ರದರ್ಶನದ ಭಾವಾರ್ಥವನ್ನು ನಾನು ಮೇಲ್ಕಂಡಂತೆ ಒಂದೇ ಸಾಲಿನಲ್ಲಿ ವಿವರಿಸಿದ್ದೇನೆ. ಅಂದರೆ ಗಾಂಧಿಯ ಹಿತ ನುಡಿಗಳು ಅವರ ಮಕ್ಕಳ ದೃಷ್ಟಿಯಲ್ಲಿ (ಅಥವಾ ನಾಟಕದ ಮೂಲಕ ಸಾರ್ವಜನಿಕವಾಗಿ) ಅವನೊಬ್ಬ ಕ್ರೂರಿ, ಬೋರ್ವೆಲ್, ರಿಗ್, ರಿಂಗ್ ಮಾಸ್ಟರ್ ಇತ್ಯಾದಿ ಭಾವನೆಗಳು ಉದ್ಭವಿಸುವಂತೆ ಹೇಗೆ ಕುಹಕದ ದೃಷ್ಟಿಯಲ್ಲಿ ಪ್ರತಿಬಿಂಬಿಸಲಾಗಿದೆ ಎಂಬುದನ್ನು ತಿಳಿಸಿದ್ದೇನೆ. ಹಾಗೆ ಮಾಡಿದಾಗ ಅದು ಗಾಂಧಿಯನ್ನು ಬೇರೆಯದೇ ದೃಷ್ಟಿಯಿಂದ ನೋಡಲು ಒದಗಿಸಿಕೊಟ್ಟ ಮಾನದಂಡವೊಂದರ ಮೀಟರ್ ಕಡ್ಡಿಯೇ ತಾನೇ? (ಮರೆಯಬೇಡಿ ಇದು ನಾಟಕದ ವಿಮರ್ಶೆ)

ಎಚ್.ಎಸ್. ಪ್ರಭಾಕರ's picture
ಗುರು, 26/11/2009 - 13:57 ರಂದು ಎಚ್.ಎಸ್. ಪ್ರಭಾಕರ ಅವರು ಹೇಳುತ್ತಾರೆ
ಪ್ರಿಯ ಉಮಾಶಂಕರ್. ಇದು ಗಾಂಧಿ

ಪ್ರಿಯ ಉಮಾಶಂಕರ್. ಇದು ಗಾಂಧಿ ವರ್ಸಸ್ ಗಾಂಧಿ ನಾಟಕ ಪ್ರಯೋಗದ ಒಂದು \ವಿಮರ್ಶೆ. ಹೀಗಾಗಿ ಇಲ್ಲಿ ಗಾಂಧಿ ಕುಟುಂಬ ಹಾಗೂ ಅದರಲ್ಲಿನ ವ್ಯಕ್ತಿಗಳೇ ಪ್ರಧಾನ.
`ಮೇಲಿನ ನಾಟಕವು ಗಾಂಧಿಯವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ್ದು ಅದು ಬಿಡಿ\ಎಂದು ಹೇಳುತ್ತಾ ನೀವು ಪ್ರಧಾನ ಭಾಗವನ್ನೇ ಏಕೆ ಬಿಡುತ್ತಿದ್ದೀರಿ? ಒಂದು ರಾಜಕೀಯದ ಕಪ್ಪು ಛಾಯೆ ಒಂದು ಕುಟುಂಬದ ಮೇಲೆ ಹೇಗೆ ತನ್ನ ಪ್ರಭಾವ ಬೀರುತ್ತದೆ ಎಂದಷ್ಟೇ ನಾನು ಇಲ್ಲಿ ಹೇಳಿರುವುದು. ಅದು ಬಿಟ್ಟು, ಗಾಂಧಿಯವರು ರಾಜಕೀಯವಾಗಿಯು ಹಿಂದೂಗಳಿಗೆ ಸಾಕಷ್ಟು ಪೆಟ್ಟುಗಳನ್ನು ಕೊಟ್ಟಿದ್ದು ಇತಿಹಾಸದಲ್ಲಿ ದಾಖಲಾಗಿಯೇ ಇದೆ. ಎಂದರೆ ನಾನು ಏನು ಹೇಳಲಿ? `ಇರಬಹುದು; ಅದು ಗಾಂಧೀಜಿ ರಾಜಕೀಯವಾಗಿ ಮಾಡಿಕೊಂಡ ಅತಿ ದೊಡ್ಡ ತಪ್ಪು' ಎಂದೇ ಹೇಳಬೇಕು. ಅದು ಕೌಟುಂಬಿಕವಾಗಿ ಹರಿಲಾಲನೇ ಇರಲಿ; ರಾಜಕೀಯವಾಗಿ ಗಾಂಧಿಯೇ ಇರಲಿ; ಯಾರೇ ಆದರೂ ಕೊನೆಗೆ `ಮಾಡಿದುಣ್ಣೋ ಮಾರಾಯ ಅಷ್ಟೆ'? ಅದನ್ನೇ ನಾನಿಲ್ಲಿ ಪ್ರತಿಪಾದಿಸಿರುವುದು. ಸತ್ಯ, ಅಹಿಂಸೆ, ಧರ್ಮ ಎಂಬ ಅಮೂರ್ತಗಳಿಗೆ ನಾನಿಲ್ಲಿ ಗಾಂಧಿ ಎಂಬ ವ್ಯಕ್ತಿಯ ಮೂರ್ತ ರೂಪ ಕೊಟ್ಟಿದ್ದೇನೆ ಅಷ್ಟೆ. ನಾನೇ ಹೇಳಿದ್ದೇನಲ್ಲಾ: ಆ ವ್ಯಕ್ತಿಯನ್ನು ಮರೆತೇ ಬಿಡೋಣ. ಆದರೆ ಆತ ಹಿಡಿದಿದ್ದ `ಸಾಧನ'ಗಳು ಇವೆಯಲ್ಲ ಅವು? ಮನುಕುಲದ ಆರಂಭದಿಂದ ಅಂತ್ಯವಾಗುವವರೆಗೂ ಅವು `ನಿಮಗಾಗಿ ನಾವು ಇಲ್ಲಿ ಇದ್ದೇವೆ' ಎಂದು ಸಾರುತ್ತಾ ನಿಂತೇ ಇರುತ್ತವೆ' ಎಂದು! ಇನ್ನೇನಾದರೂ ಗೊಂದಲವಿದೆಯೇ?

ಉಮಾಶಂಕರ ಬಿ.ಎಸ್'s picture
ಗುರು, 26/11/2009 - 16:39 ರಂದು ಉಮಾಶಂಕರ ಬಿ.ಎಸ್ ಅವರು ಹೇಳುತ್ತಾರೆ
ಪ್ರಿಯ ಪ್ರಭಾಕರ್ ರವರೆ ನೀವು

ಪ್ರಿಯ ಪ್ರಭಾಕರ್ ರವರೆ ನೀವು ನಿಮ್ಮ ಲೇಖನದಲ್ಲಿ ಹೇಳಿದ ``ಅದ್ಯಾವೊದೋ ನೈತಿಕ ಶಿಕ್ಷಣ''ದ ಹೆಸರಲ್ಲಿ ಎಲ್ಲವನ್ನೂ ಪ್ರಶ್ನಿಸುವ ಹಾಗೂ ಎಲ್ಲದಕ್ಕೂ ಅಡ್ಡಿಪಡಿಸುವ ಒಂದು ಮಹಾನ್ ಕೊರೆತ'- ಇದು ಗಾಂಧಿಯನ್ನು ``ಬೇರೆಯದೇ ದೃಷ್ಟಿ ಕೋನದಿಂದ ಅಳೆಯಲು'' ದೇಶದ ಒಂದು ವರ್ಗಕ್ಕೆ ಸಿಕ್ಕಿದ ಉದ್ದನೆಯ ಮೀಟರ್ ಕಡ್ಡಿ! ಎಂಬ ಸಾಲು ಮೇಲಿನಂತೆ ನಾನು ಪ್ರತಿಕ್ರಿಯಿಸುವಂತೆ ಮಾಡಿದೆ. ಅಷ್ಟೇ ಹೊರತು ಅವರು ಹಿಡಿದ ಸಾಧನಗಳ ಬಗ್ಗೆ ನಾನು ಮಾತನಾಡಿಲ್ಲ ಅಲ್ಲವೇ?

ಉಮಾಶಂಕರ ಬಿ.ಎಸ್'s picture
ಗುರು, 26/11/2009 - 10:03 ರಂದು ಉಮಾಶಂಕರ ಬಿ.ಎಸ್ ಅವರು ಹೇಳುತ್ತಾರೆ
ಪ್ರಿಯ ಪ್ರಭಾಕರ್ ರವರೆ ನಿಮ್ಮ ಈ

ಪ್ರಿಯ ಪ್ರಭಾಕರ್ ರವರೆ ನಿಮ್ಮ ಈ ಲೇಖನದ ತಿರುಳಿಗೆ ನನ್ನ ಸಹಮತವಿಲ್ಲ. ಗಾಂಧಿ ಇಡೀ ಜಗತ್ತು ಕಂಡ ಮಹಾನ್ ಮಾವವತಾವಾದಿ ಅದು ಒಪ್ಪತಕ್ಕಮಾತು. ಆದರೆ ನೀವು ಅದನ್ನೇ ಆಧಾರವಾಗಿಟ್ಟುಕೊಂಡು ಗಾಂಧಿಯವರು ಮಾಡಿದೆಲ್ಲಾ ಸರಿ ಬೇರೆಯವರೆಲ್ಲಾ ತಪ್ಪು ಎಂಬಂತೆ ಬಿಂಬಿಸಿರುವುದು ಸರಿಯಲ್ಲ. ಮೇಲಿನ ನಾಟಕವು ಗಾಂಧಿಯವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ್ದು ಅದು ಬಿಡಿ. ಆದರೆ ಗಾಂಧಿಯವರು ರಾಜಕೀಯವಾಗಿಯು ಹಿಂದೂಗಳಿಗೆ ಸಾಕಷ್ಟು ಪೆಟ್ಟುಗಳನ್ನು ಕೊಟ್ಟಿದ್ದು ಇತಿಹಾಸದಲ್ಲಿ ದಾಖಲಾಗಿಯೇ ಇದೆ.
ಈ ರೀತಿ ಅಭಿಪ್ರಾಯಿಸಿದ್ದಕ್ಕೆ ನೀವು ನನ್ನನ್ನು ಹಿಂದುವಾದಿ ಎನ್ನುವ ಪಟ್ಟಕಟ್ಟಿದರೂ ಚಿಂತೆಯಿಲ್ಲ ಏಕೆಂದರೆ ಸರ್ವಧರ್ಮಗಳಿಗೂ ಮೂಲವಾದ ಹಿಂದು ಧರ್ಮದಲ್ಲಿ ಹುಟ್ಟಿದ್ದಕ್ಕೆ ನನ್ಗೆ ತುಂಬಾ ಹೆಮ್ಮೆಯಿದೆ. (ಆದರೂ ನನ್ನ ವಿಧ್ಯಾರ್ಥಿ ಜೀವನದ ಒಡನಾಟವೆಲ್ಲಾ ಮಾರ್ಕ್ಸ್ ವಾದದ ನೆರಳಲ್ಲೇ ಬೆಳೆದು ಬಂದಿದೆ).

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
13 + 4 =
ಈ ಸುಲಭ ಗಣಿತ ಪ್ರಶ್ನೆಗೆ ಉತ್ತರ ನೀಡಿ. ಉದಾಃ 1 + 3, ಇದಕ್ಕೆ 4 ಬರೆಯಿರಿ. ಗಮನಿಸಿ ಅಂಕಿಗಳು ಇಂಗ್ಲೀಷ್ ನಲ್ಲಿಯೇ ಇರಬೇಕು.
ಬರೆದವರು
ಪ್ರಭಾಕರ. ಎಚ್.ಎಸ್ ಪ್ರಭು
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನಾನು ಕನ್ನಡ ಭಾಷಾ ಪತ್ರಕರ್ತ. ಸಂಯುಕ್ತ ಕರ್ನಾಟಕ ದೈನಿಕದಲ್ಲಿ ಹಾಸನ ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಪರಿಸರ ಸಂರಕ್ಷಣೆ, ಸಾಹಿತ್ಯ, ಸಂಗೀತ, ಭಾರತೀಯ ಸಂಸ್ಕೃತಿಗಳಲ್ಲಿ \ಆಸಕ್ತ ಹಾಗೂ ಸಕ್ರಿಯನೂ ಆಗಿದ್ದೇನೆ. ಲೇಖಕನೂ ಹೌದು.
ಇವರ ವಿಸ್ಮಯ ಪುಟ
ಸಿಂಡೀಕೇಟ್
Syndicate content