ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕ ಪ್ರಬಲ ಹೋರಾಟ , ಚಳುವಳಿ , ಅಸಹಕಾರ ಮುಂತಾದವುಗಳು ನಿರಂತರವಾಗಿ ನಡೆದೇ ಇದ್ದವು. ಆದರೆ ಬ್ರಿಟೀಷರು ಅವುಗಳನ್ನು ಅಷ್ಟೇ ಪ್ರಬಲವಾಗಿ ಹತ್ತಿಕ್ಕುತ್ತಿದ್ದರು. ಆದರೆ 1946ರಲ್ಲಿ ಭಾರತೀಯ ಮಹಾನೌಕಾಪಡೆಯ ದಂಗೆ ಮತ್ತು ಅದರ ನಂತರದ ಘಟನೆಗಳು 1947ರ ಭಾರತದ ಸ್ವಾತಂತ್ರ್ಯದ ನೈಜ ಕಾರಣಗಳಾಗಿವೆ..
.
"ಅಂದು 18 ಫೆಬ್ರವರಿ 1946ರಲ್ಲಿ ಮುಂಬೈನ ಬಂದರಿನಲ್ಲಿ ಭಾರತೀಯ ನೌಕಾಪಡೆಯ ನಾವಿಕರು ದಂಗೆಯೆದ್ದರು. ಈ ದಂಗೆ ಬಹು ಬೇಗ ಕರಾಚಿ ಮತ್ತು ಕಲ್ಕತ್ತೆಯ ಬಂದರುಗಳಿಗೂ ಹರಡಿತು. ಒಟ್ಟು 78 ಹಡಗುಗಳು, ಮತ್ತು ಸುಮಾರು 20,000 ನಾವಿಕರು ಈ ದಂಗೆಯಲ್ಲಿ ಪಾಲ್ಗೊಂಡರು.
ಬ್ರಿಟೀಷ್ ಅಧಿಕಾರಿಗಳ ಜನಾಂಗೀಯ ಬೇಧ ತೋರುವ ನಡವಳಿಕೆ, ಸಾಮಾನ್ಯ ಜೀವನ ಸ್ಥಿತಿಗಳು ಈ ದಂಗೆಗೆ ಕಾರಣವಾಗಿದ್ದವು ಅಧಿಕಾರಿಗಳ ಅಪ್ಪಣೆಗಳ ನಿರ್ಲಕ್ಷೆ, ಹಡಗುಗಳಲ್ಲಿ ಭಾರತೀಯ ಧ್ವಜಗಳ ಹಾರಾಡುವಿಕೆ, ಮುಂತಾದ ಚಟುವಟಿಕೆಗಳು ನಡೆದವು. ಭಾರತೀಯ ನಾಗರೀಕರು ಈ ದಂಗೆಗೆ ಬೆಂಬಲ ನೀಡಿದರು. ನಂತರ ವಾಯು ಸೇನೆ ಮತ್ತು ಮುಂಬೈ ಪೋಲೀಸ್ ಕೂಡ ದಂಗೆಯಲ್ಲಿ ಸೇರಿದರು. ಮದ್ರಾಸು ಮತ್ತು ಪೂನೆಗಳಲ್ಲಿ ಸೇನಾ ತುಕಡಿಗಳು ಕೂಡ ದಂಗೆಯುದ್ದವು.. ಈ ಘಟನೆಗಳು ಭಾರತದ ಸ್ವಾತಂತ್ರ್ಯಕ್ಕೆ ನಾಂದಿಯಾಯಿತು "
ಎರಡನೇ ಮಹಾಯುದ್ಧದಲ್ಲಿ ಆರ್ಥಿಕ, ರಾಜಕೀಯ ಮತ್ತು ಸೇನೆಗಳ ಅಪಾರ ಬೆಲೆಯನ್ನು ತೆತ್ತಿದ್ದ ಬ್ರಿಟೀಷ್ ಸಾಮ್ರಾಜ್ಯ ಈ ಆಂದೋಲನದಿಂದ ಎಚ್ಚೆದ್ದ ಭಾರತೀಯರನ್ನು ಸದೆಬಡೆಯುವ ಬಲವನ್ನು ಹೊಂದಿರಲಿಲ್ಲ. ಈ ನಾಗರೀಕ ಆಂದೋಲನದೊಂದಿಗೆ ನೌಕಾಪಡೆಯ ದಂಗೆ ಸೇರಿದಾಗ, ಇವುಗಳ ಒಟ್ಟು ಸಾಮರ್ಥ್ಯದ ಸ್ಪಷ್ಟ ಅರಿವಿದ್ದ ಬ್ರಿಟೀಷರಿಗೆ ಇನ್ನು ಮುಂದೆ ಭಾರತವನ್ನು ಆಳುವುದು ದುಸ್ಸಾಹಸವೇ ಸರಿ ಎಂಬುವುದು ಅರಿವಾಯಿತು.
ಈ ಕಾರಣದಿಂದ 1946ರ ಮಧ್ಯದೊಳಗೆ ಎಲ್ಲಾ ರಾಜಕೀಯ ಕಾರಣಕ್ಕೆ ಬಂಧಿತರಾದವರನ್ನು ಬ್ರಿಟೀಷ್ ಸರ್ಕಾರ ವಿಮೋಚನೆಗೊಳಿಸಿತು. ಭಾರತದ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯುವ ಗುರಿಯಿಂದ ಕಾಂಗ್ರೆಸ್ ಬ್ರಿಟೀಷ್ ಸರ್ಕಾರದೊಂದಿಗೆ ಮಾತುಕತೆ ಪ್ರಾರಂಭ ಮಾಡಿತು.
ಜೂನ್ 3, 1947ರಂದು, ಕೊನೆಯ ಬ್ರಿಟಿಷ್ ಭಾರತದ ಗವರ್ನರ್ ಜನರಲ್ ಆದ , ಲಾರ್ಡ್ ಲೂಯಿ ಮೌಂಟ್ಬ್ಯಾಟನ್ರವರು ಜಾತ್ಯತೀತ ಭಾರತ ಮತ್ತು ಮುಸ್ಲಿಂ ಪಾಕಿಸ್ತಾನ ಎಂದು ಎರಡು ಭಾಗಗಳಾಗಿ ಭಾರತದ ವಿಭಜನೆಯನ್ನು ಪ್ರಕಟಿಸಿದರು. ಅಗಸ್ಟ್ ೧೫, ೧೯೪೭ರ ಮಧ್ಯರಾತ್ರಿ ಭಾರತವು ಸ್ವತಂತ್ರ ರಾಷ್ಟ್ರವಾಗಿ ಉದಯಿಸಿತು."

ನಿಮ್ಮ ಅನಿಸಿಕೆ ತಿಳಿಸಿ