ನಮ್ಮ ನೆಚ್ಚಿನ ವಿಸ್ಮಯ ನಗರಿಯ ಚರ್ಚಾ ಕೂಟದಲ್ಲಿ `ಮಾಧ್ಯಮಗಳು' ಎಂಬ ಪ್ರತ್ಯೇಕ ವಿಷಯವಿಲ್ಲದಿರುವುದರಿಂದ ಇಲ್ಲಿ ನಾನು `ಭಾರತ'ದ ಅಡಿಯಲ್ಲಿ ಈ ಚರ್ಚಾ ವಿಷಯ ಮಂಡಿಸುತ್ತಿದ್ದೇನೆ. ಕಳೆದ 25 ವರ್ಷಗಳಿಂದ ನಾನೂ ಸಹ ಮುದ್ರಣ ಮಾಧ್ಯಮ ವೃತ್ತಿಯಲ್ಲಿರುವವನೇ ಆಗಿದ್ದೇನೆ. ಹೀಗಾಗಿ ವೈಯಕ್ತಿಕವಾಗಿ ಮಾಧ್ಯಮಗಳ ಕುರಿತು ನನಗೂ ಒಂದು ಖಚಿತ ಪರಿಕಲ್ಪನೆ ಹಾಗೂ ಆಶಯವಿದೆ. ಮೊದಲು ಅದನ್ನು ಹೇಳಿಬಿಡುತ್ತೇನೆ. ನಂತರ ಚರ್ಚೆ ಆರಂಭಿಸಬಹುದು:
ನನ್ನ ಪ್ರಕಾರ ಸಮೂಹ ಮಾಧ್ಯಮಗಳ ಮೂಲಕ `ನಿಜವಾದ ಪ್ರಗತಿ' ಸಾಧಿಸಬೇಕಾದ ಪರಿಸ್ಥಿತಿ ಸದ್ಯಕ್ಕೆ ತೀರಾ ಹದಗೆಟ್ಟಿದೆ. ದಿನೇ ದಿನೇ ಮೌಲ್ಯಗಳ ಕುಸಿತಕ್ಕೆ ಈ ಸಮೂಹ ಮಾಧ್ಯಮಗಳೂ ತಮ್ಮದೇ ಆದ ಪಾಲು ನೀಡುತ್ತಿವೆ. ಮೊದಲು ತಾನು ನಿಂತ ನೆಲ ಯಾವುದು? ಅದರ ಮಹತ್ವವೇನು? ನಮ್ಮ ದೇಶದ ತಳಹದಿ ಯಾವುದು? ಅದರ ಪರಂಪರೆ ಏನು? ಏಕೆ ಎಲ್ಲವೂ ಹಾಳಾಗಿದೆ? ದಾರಿ ತಪ್ಪಿದ್ದು ಹೇಗೆ? ಏಕೆ ಇಡೀ ವಿಶ್ವ ಇದೀಗ ನಮ್ಮತ್ತ ನೋಡುತ್ತಿದೆ? ತಮಗೆ ಉಳಿಯಲು ಮುಕ್ತ ಶಕ್ತಿ ನೀಡಿದ ಈ ದೇಶದ ಋಣ ತೀರಿಸಲು ಹಾಗೂ ಅದರಲ್ಲಿನ ಮಾನವ ಸಂಪನ್ಮೂಲದ ಏಳಿಗೆಗೆ ತಾನು ಏನು ಮಾಡಬೇಕು? ಸಮೂಹ ಮಾಧ್ಯಮಗಳ ಸತ್ಪರಿಣಾಮಗಳೇನು; ದುಷ್ಪರಿಣಾಮಗಳೇನು? ಸತ್ಪರಿಣಾಮ ಉಂಟಾಗಲು ತಾನು ಏನು ಮಾಡಬೇಕು? ಮುಂದಿನ ಪೀಳಿಗೆಗೆ ಯಾವ ಮಾರ್ಗ ಹಾಕಿಕೊಡಬೇಕು?- ಇತ್ಯಾದಿಯಾಗಿ ಇರಬೇಕಾದ ಪರಿಜ್ಞಾನವೆಲ್ಲ ಈಗ ಮಾಯವಾಗಿವೆ. ಮತ್ತೊಂದು ರೀತಿ ಹೇಳಬೇಕೆಂದರೆ ಸದ್ಯಕ್ಕೆ ಈ ದೇಶದ ನಿಜವಾದ ಭಯೋತ್ಪಾದಕರೆಂದರೆ ಈ ಸಮೂಹ ಮಾಧ್ಯಮಗಳಲ್ಲಿ ಕೆಲಸ ಮಾಡುವ ಮಂದಿ ಎಂದರೂ ಉತ್ಪ್ರೇಕ್ಷೆಯಲ್ಲವೇನೋ...!? (ನಾನು ಅಂತಹ ಪ್ರವೃತ್ತಿ ವಿರೋಧಿಸುತ್ತಿರುವುದರಿಂದಲೇ ಈ ಚರ್ಚೆ ಆರಂಭಿಸಿದ್ದೇನೆ ಎಂದು ಸ್ಪಷ್ಟೀಕರಿಸಲು ಇಚ್ಛಿಸುತ್ತೇನೆ.) ನೀವುಗಳು ಏನಂತೀರಿ?
(ಚರ್ಚೆ ಚಿಂತನೆಗೆ ದಾರಿಯಾಗಲಿ; ನಮ್ಮ ಜ್ಞಾನ ವೃದ್ಧಿಸಿಕೊಳ್ಳುವಂತಿರಲಿ; ಸರಿಯಾದ ದಾರಿ ತೋರಿಸುವಂತಿರಲಿ. ಅವರವರ ಧ್ಯೇಯ, ಧೋರಣೆ, ನಂಬಿಕೆಗಳು ಅವರವರಿಗೆ ಬಿಟ್ಟದ್ದು ಎಂಬುದನ್ನು ಮರೆಯಬಾರದು; ಇವೆಲ್ಲವುಗಳ ಮಧ್ಯೆ ನಿಜವಾದ `ಸತ್ಯ' ಎಲ್ಲೋ ಅಡಗಿರುತ್ತದೆ. ಅದನ್ನು ಹುಡುಕಿ ತೆಗೆಯುವ ಕೆಲಸವಾಗಲಿ. ಹೀಗಾಗಿ ಯಾರೂ ಯಾರ ವಿರುದ್ಧವೂ ವೈಯಕ್ತಿಕವಾಗಿ ಟೀಕಿಸುವುದಾಗಲಿ, ವಿಷಯದ ಅರಿವಿಲ್ಲದೆ ಇನ್ನೊಬ್ಬರ ಧ್ಯೇಯ ಧೋರಣೆ ಕುರಿತು ಅನಗತ್ಯ ಚುಚ್ಚುವುದಾಗಲಿ ಮಾಡಬಾರದೆಂದು ಕಳಕಳಿಯಿಂದ ಕೋರುತ್ತೇನೆ; ಅದು ನಮ್ಮ ಅಜ್ಞಾನವನ್ನೇ ಅನಾವರಣಗೊಳಿಸುತ್ತದೆ ಎಂಬ ಎಚ್ಚರವಿರಲಿ; ಏಕೆಂದರೆ ಮನಸ್ಸು ಎಂಬ ಚಿಲುಮೆಯಿಂದ ಸ್ಫೂರ್ತಿ ಹಾಗೂ ಜ್ಞಾನದ ನೀರು ಉಕ್ಕಿ ಅದನ್ನು ಬೇರೆಯವರೂ ಮೊಗೆದು ಕುಡಿಯುವಂತಾಗಬೇಕೇ ಹೊರತು, ಬಿಸಿ ನೀರಿನ ಬುಗ್ಗೆ ಉಕ್ಕಿ ಎಲ್ಲರೂ ದೂರ ಸರಿಯುವಂತೆ ಆಗಬಾರದು. ಏಕೆಂದರೆ ಮನಸ್ಸು ನಮ್ಮದು; ಅದರ ಆರೋಗ್ಯವೂ ನಮ್ಮದೇ ಎಂಬುದನ್ನು ಮರೆಯಬಾರದಲ್ಲವೆ!?)

ಪ್ರಭಾಕರ್ ರವರೆ
ನಿಮ್ಮ ಅಭಿಪ್ರಾಯ ನಿಜಕ್ಕೂ ಸರಿಯಾಗಿಯೆ ಇದೆ. ಇಂದಿನ ಮಾಧ್ಯಮಗಳಿಗೆ ಕೇವಲ ಬ್ರೇಕಿಂಗ್ ನ್ಯೂಸ್ ಮಾತ್ರ ಬೇಕಾಗಿದೆ, ಆ ಬ್ರೇಕಿಂಗ್ ನ್ಯೂಸ್ ನ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಅವುಗಳ ಅವಗಾಹನೆ ಅಷ್ಟಕ್ಕಷ್ಟೆ. ಈ ದೃಶ್ಯ ಮಾಧ್ಯಮಗಳ ದಾಳಿಗೆ ಮೊದಲು ಮುದ್ರಣ ಮಾಧ್ಯಮಗಳಷ್ಟೇ ಇದ್ದಾಗ ನಾವು ಸ್ವಲ್ಪ ನೈತಿಕತೆ, ನೀತಿ, ನಿಜಾಯಿತಿಗಳಾದರು ಇದ್ದವು, ಅವುಗಳಿಂದ ನಾವು ಸಮಾಜದ ಒಳಿತನ್ನು ನಿರೀಕ್ಷಿಸಬಹುದಾಗಿತ್ತು, ಆದರೆ ಇಂದಿನ ಯಾವುದೇ ಮಾಧ್ಯಮಗಳಲ್ಲಿ ನಾವು ಅನೌಪಚಾರಿಕ ಸುದ್ದಿಗಳನ್ನು ಬಿಟ್ಟರೆ ಇನ್ನೇನನ್ನು ನಿರೀಕ್ಷಿಸಲು ಸಧ್ಯವೇ ಇಲ್ಲ